Articles Category

ಮೊಟ್ಟ ಮೊದಲ ಬಾರಿಗೆ ಡಿಜಿಟಲ್‌ ಕೃಷಿ ಗಣತಿ,  ಮೊಬೈಲ್‌ ಆ್ಯಪ್‌ ಮೂಲಕ ಮಾಡಲಾಗುತ್ತಿದೆ ದತ್ತಾಂಶ ಸಂಗ್ರಹ.

data collection agriculture

ಮೊಟ್ಟ ಮೊದಲ ಬಾರಿಗೆ ಡಿಜಿಟಲ್‌ ಕೃಷಿ ಗಣತಿ,  ಮೊಬೈಲ್‌ ಆ್ಯಪ್‌ ಮೂಲಕ ಮಾಡಲಾಗುತ್ತಿದೆ ದತ್ತಾಂಶ ಸಂಗ್ರಹ.

ಡಿಜಿಟಲ್‌ ಕೃಷಿ ಗಣತಿ – ನಮ್ಮ ದೇಶದಲ್ಲಿ ಹನ್ನೊಂದನೇ ಕೃಷಿ ಗಣತಿಗೆ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಗಣತಿಗೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ. ಹೌದು, ಮೊಬೈಲ್ ಆ್ಯಪ್‌ ಮೂಲಕ ಕೃಷಿ ಗಣತಿ ಕಾರ್ಯ ನಡೆಯಲಿದ್ದು, ನಮ್ಮ ರಾಜ್ಯದಲ್ಲೂ ಗಣತಿದಾರರಿಗೆ ತರಬೇತಿ ನೀಡಲಾಗುತ್ತಿದೆ.

ಹನ್ನೊಂದನೇ ಕೃಷಿ ಗಣತಿಗಾಗಿ ಅಗ್ರಿ 21 – 22 ಎನ್ನುವ ಮೊಬೈಲ್‌ ಆ್ಯಪ್‌ ನ್ನು ವಿನ್ಯಾಸಗೊಳಿಸಲಾಗಿದ್ದು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಗಣತಿ ನಡೆಯಲಿದೆ. ಆಯಾ ಗ್ರಾಮ ಲೆಕ್ಕಿಗರು ಗಣತಿ ಕಾರ್ಯ ನಡೆಸಲಿದ್ದು, ಕಂದಾಯ ನಿರೀಕ್ಷಕರು, ತಹಸೀಲ್ದಾರ್‌ಗಳು ಹಂತ ಹಂತವಾಗಿ ಗಣತಿ ಕಾರ್ಯದಲ್ಲಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

 1970- 71ರಿಂದ ಕೃಷಿ ಗಣತಿ ನಡೆಸಲಾಗುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ಗಣತಿ ಕಾರ್ಯ ನಡೆಯುತ್ತದೆ. ಈ ವರ್ಷದ ಗಣತಿ ಹನ್ನೊಂದನೇಯದ್ದಾಗಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ.

ಅಗ್ರಿ 21 – 22 ಆ್ಯಪ್‌ನ ಲಾಗಿನ್‌ ಹಕ್ಕನ್ನು ನಮ್ಮ ರಾಜ್ಯದಿಂದ ಪ್ರತೀ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಎಂದರೆ ಡಿಎಸ್‌ಒ ಗಳಿಗೆ ನೀಡಲಾಗಿದೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪ್ರತೀ ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ದಾರ್‌ಗಳಿಗೆ ಲಾಗಿನ್‌ ಕ್ರಿಯೇಟ್‌ ಮಾಡಿಕೊಡುತ್ತಾರೆ. ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಕಂದಾಯ ನಿರೀಕ್ಷಕರಿಗೆ ಲಾಗಿನ್‌ ಹಕ್ಕನ್ನು ನೀಡುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಗಿನ್‌ ನ್ನು ಕ್ರಿಯೇಟ್ ಮಾಡಿ ಕೊಡುವುದು ಕಂದಾಯ ನಿರೀಕ್ಷಕರ ಜವಾಬ್ದಾರಿ. ನಂತರ ಗ್ರಾಮ ಲೆಕ್ಕಾಧಿಕಾರಿಗಳು ಆ್ಯಪ್‌ ಡೌನ್‌ ಲೋಡ್ ಮಾಡಿಕೊಂಡು ತಮಗೆ ನೀಡಿರುವ ಯೂಸರ್‌ ಐಡಿ, ಪಾಸ್‌ವರ್ಡ್‌ ಹಾಕಿ ಲಾಗಿನ್‌ ಆದಾಗ, ತಮ್ಮ ವ್ಯಾಪ್ತಿಯ ಹಳ್ಳಿಗಳು ಹಾಗೂ ಖಾತೆಗಳ ವಿವರ ಲಭ್ಯವಾಗುತ್ತವೆ. ನಂತರ ಗ್ರಾಮ ಲೆಕ್ಕಾಧಿಕಾರಿಗಳು ಸೂಚಿಸಲಾದ ನಿರ್ದಿಷ್ಟ ಮಾದರಿಯಲ್ಲಿ ಗಣತಿ ಕಾರ್ಯವನ್ನು ಮಾಡಿ ದತ್ತಾಂಶ ದಾಖಲೀಕರಿಸಬೇಕು.

ಗಣತಿಯ ವ್ಯಾಪ್ತಿಗೆ ಯಾವ ಅಂಶಗಳು ಒಳಪಟ್ಟಿವೆ ಎಂದು ನೋಡುವುದಾದರೆ

ಈ ಕೃಷಿ ಗಣತಿಯಲ್ಲಿ ಜಮೀನುಗಳ ಸಂಖ್ಯೆ, ವಿಸ್ತೀರ್ಣ, ವರ್ಗವಾರು ಹಂಚಿಕೆ, ಸಣ್ಣ ಹಾಗೂ ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರನ್ನು ಗುರುತಿಸುವುದು, ಬೆಳೆಗಳ ಸಮಗ್ರ ಮಾಹಿತಿ, ಸಾಗುವಳಿ ಹಿಡುವಳಿದಾರರ ಸಂಖ್ಯೆ, ಭೂ ಬಳಕೆ, ಬೆಳೆ ವಿಭಾಗ, ಉತ್ಪಾದನೆ ಮುಂತಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಕೃಷಿಯ ಸಮಗ್ರ ಮಾಹಿತಿ ಮತ್ತು ದತ್ತಾಂಶ ಸಂಗ್ರಹದ ಆಧಾರದ ಮೇಲೆ ಪ್ರತಿ ಕೃಷಿ ಕ್ಷೇತ್ರದ ರಚನೆ ಹಾಗೂ ಗುಣ ಲಕ್ಷಣಗಳನ್ನು ತಿಳಿದುಕೊಂಡು, ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಪ್ರಗತಿ ಮೌಲ್ಯ ಮಾಪನ ಮಾಡಲು ಗಣತಿ ಅಗತ್ಯವಾಗಿದೆ.

ಸಾಮಾನ್ಯವಾಗಿ ಪ್ರತಿ 5 ವರ್ಷಕ್ಕೊಮ್ಮೆ ಕೃಷಿ ಗಣತಿ ನಡೆಸಲಾಗುತ್ತದೆ. ಈಗ ಹನ್ನೊಂದನೇ ಗಣತಿ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್‌ ಗಣತಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ತಹಸೀಲ್ದಾರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಅತೀ ಶೀಘ್ರದಲ್ಲೇ ಗಣತಿ ಕಾರ್ಯ ಆರಂಭವಾಗಲಿದೆ ಎಂದು ತುಮಕೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯಾಗಿರುವ ಡಿ. ರಂಗಸ್ವಾಮಿಯವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ… Pradhan Mantry Kisan Yojana ಪ್ರಧಾನಮಂತ್ರಿ ಕಿಸಾನ್ 13ನೇ ಕಂತು ಬಿಡುಗಡೆ, ಯೋಜನೆಯ ಲಾಭ ಪಡೆಯಲು ಈ ಕೂಡಲೇ ಇಕೈವೈಸಿ ನವೀಕರಣ ಮಾಡಿಕೊಳ್ಳಿ.

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *