ರಾಮನಗರ ಜಿಲ್ಲೆಯಲ್ಲಿ ವಿದ್ಯಾನಿಧಿ ಯೋಜನೆಯ ಲಾಭ ಪಡೆದ 12,526 ರೈತರ ಮಕ್ಕಳು
ವಿದ್ಯಾನಿಧಿ ಯೋಜನೆ : ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ 2021-22ನೇ ಸಾಲಿನಲ್ಲಿ ರಾಮನಗರ ಜಿಲ್ಲೆಯಲ್ಲಿ ಇದುವರೆಗೂ 12,526 ವಿದ್ಯಾರ್ಥಿಗಳ ಖಾತೆಗೆ 4.98 ಕೋಟಿ ರೂ. ಶಿಷ್ಯ ವೇತನ ಜಮೆ ಮಾಡಲಾಗಿದೆ. ರೈತರ ಮಕ್ಕಳ ಹೆಚ್ಚಿನ ಮತ್ತು ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇತ್ತೀಚೆಗೆ ಹೊಸ ಶಿಷ್ಯ ವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು.
ಈಗಾಗಲೇ ಜಿಲ್ಲೆಯಲ್ಲಿ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಿಷ್ಯ ವೇತನ ಕೋರಿ ಆನ್ ಲೈನ್ ನಿಗದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈವರೆಗೂ ಮೊದಲನೇ ಹಂತದಲ್ಲಿ 12,526 ವಿದ್ಯಾರ್ಥಿಗಳಿಗೆ 4,98,28,000 ರೂ. ಶಿಷ್ಯ ವೇತನವನ್ನು ಕಲ್ಪಿಸಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದ್ದು, ದ್ವಿತೀಯ ಪಿಯುಸಿಗೆ ದಾಖಲಾಗುತ್ತಿದ್ದಂತೆಯೇ ಕಾಲೇಜುಗಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಆಯಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ತಲಾ 2,500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 3,000 ರೂ. ನೀಡಲಾಗಿದೆ.
ಈ ಯೋಜನೆಯು ಮುಂದುವರೆದಿದ್ದು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, ವಿದ್ಯಾರ್ಥಿಯ ಪೋಷಕರಿಗೆ ಜಮೀನು ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ನಂತರ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಪುನರಾವರ್ತಿತ ವಿದ್ಯಾರ್ಥಿಗಳು ಅರ್ಹರಾಗಿರುವುದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಯೋಜನೆ ಇದಾಗಿದ್ದು, ಮೆಟ್ರಿಕ್ ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ರೈತರ ಮಕ್ಕಳಿಗೆ ಅವರವರ ಕೋರ್ಸ್ಗಳಿಗನುಗುಣವಾಗಿ 2500 ರಿಂದ 11 ಸಾವಿರ ರೂಪಾಯಿವರೆಗೆ ಶಿಷ್ಯ ವೇತನ ನೀಡಲಾಗುವುದು. ಇತರ ವಿದ್ಯಾರ್ಥಿ ವೇತನಗಳನ್ನು ಪಡೆಯುತ್ತಿರುವವರೂ ಸಹ ರೈತ ವಿದ್ಯಾನಿಧಿ ಶಿಷ್ಯ ವೇತನ ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ರೈತರ ಗುರುತಿನ ಸಂಖ್ಯೆ ಎಂದರೆ ಎಫ್ ಐಡಿ ಯನ್ನು ಹೊಂದಿರುವುದು ಅವಶ್ಯಕ.
ಈ ಶಿಷ್ಯ ವೇತನ ಯೋಜನೆಯನ್ನು ಎಂಟರಿಂದ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಬಾಲಕಿಯರಿಗೂ ನೀಡುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಪ್ರಕಾರ, ಪ್ರತಿ ವಿದ್ಯಾರ್ಥಿನಿಗೂ ಎರಡು ಸಾವಿರ ಶಿಷ್ಯ ವೇತನ ದೊರೆಯಲಿದ್ದು, ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.
ರೈತರಿಂದಲೇ ಕಮಿಷನ್ ಪಡೆಯುತ್ತಿದ್ದಾರೆ ವರ್ತಕರು, ರೈತ ಪರ ಸರ್ಕಾರ ಎಲ್ಲಿದೆ?
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ